ಆರು ದಶಕಗಳ ಹಿಂದೆ ಕಣ್ಮರೆಯಾದ ನನ್ನ ತಮ್ಮನ ನೆನಪು


ನನಗೆ ಇನ್ನೊಬ್ಬ ತಮ್ಮ ಇದ್ದ. ಅವನ ಹೆಸರು ಶ್ರೀನಿವಾಸ ರಾವ್. ನಾನು ಸೀನೂ ಎಂದು ಕರಿಯುತ್ತಿದ್ದೆ. ಅವನು ಹುಟ್ಟಿದ್ದು 25-10-1960. ವಿಧಿಯ ಆಟ ಹೇಗಿತ್ತೆಂದರೆ, 3-10-1962 ದಿನಾಂಕ ಅವನಿಗೆ ಇನ್ನೂ ಎರಡು ವರ್ಷ ಸಹಾ ತುಂಬಿರಲಿಲ್ಲ,  ಬಟಾಣಿ ತಿನ್ನುತ್ತಿದ್ದಾಗ ಒಂದು ಬಟಾಣಿ ಕಾಳು ಗಂಟಲಿನಲ್ಲಿ ಸಿಕ್ಕಿ ಕೊಂಡು ಕೊನೆ ಉಸಿರು ಬಿಟ್ಟನಂತೆ. ಆಗ ನಮ್ಮ ತಂದೆಯವರು ಸಹಾ ಕಚೇರಿ ಕೆಲಸದ ನಿಮಿತ್ತ ಹತ್ತಿರದ ಒಂದು ಹಳ್ಳಿಗೆ ಹೂಗಿದ್ದರಂತೆ.  ಮನೆ ಹತ್ತಿರದ ಪ್ರೈಮರಿ ಶಾಲೆ ಮುಂದೆ ಇರುವ ಸಿದ್ದಪ್ಪ ಮಾಸ್ತರರ ಮನೆಯಲ್ಲಿದ್ದ ನನ್ನ,  ನಿನ್ನ ತಮ್ಮ ಸತ್ತು ಹೋಗಿದ್ದಾನೆ, ಮನೆಗೆ ಬಾ ಎಂದು ನಮ್ಮ ಮನೆ ನೌಕರ ನಾಗಪ್ಪ ಕೂಗಿದ್ದು ಈಗಲೂ ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತಿದೆ.   ಕಂಕುಳಲ್ಲಿ ಹಲಗೆ ಇಟ್ಟುಕೊಂಡು ಮನೆಗೆ ಬಂದಿದ್ದ ದಾರಿ, ನಮ್ಮ ತಾಯಿ ಅಳುತ್ತಿರುವ ಸನ್ನಿವೇಶ ನನಗೆ ಈಗಲೂ ನೆನಪಿದೆ. ನನಗೆ ಆಗ 6 ವರ್ಷ ತುಂಬುವುದಕ್ಕೆ ಇನ್ನೂ 79 ದಿನಾ ಉಳಿದಿತ್ತು. ನನ್ನದು ಸಹಾ ಹುಟ್ಟು, ಸಾವು ಏನೆಂದೇ ಗೊತ್ತಿಲ್ಲದ ವಯಸ್ಸು. ಅಮ್ಮ ಯಾಕೆ ಅಳುತ್ತಿದ್ದಾಳೆ ಎನ್ನುವುದು ಗೊತ್ತಾಗಿರಲಿಲ್ಲ. ಅಮ್ಮನನ್ನು ನೋಡಿ ನಾನು ಸಹಾ ಅತ್ತುಬಿಟ್ಟೆ ಅಷ್ಟೇ. ವಿಪರ್ಯಾಸವೆಂದರೆ, ನನ್ನ ತಮ್ಮನ ಫೋಟೋ ಒಂದೇ ಒಂದು ಸಹಾ ಮನೇಲಿ ಇಲ್ಲಾ. ಆದರೆ, ನನ್ನ ಕಣ್ಣಿನ ಕೆಮೆರಾ ಸೆರೆ ಹಿಡಿದ ಅವನ ಮುದ್ದಿನ ಚಹರೆ ಈಗಲೂ ನನ್ನ ಹೃದಯ ಪಟದ ಮೇಲೆ ಉಳಿದಿದೆ. ದಶಕಗಳ ಹಿಂದೆ ಮರ್ಫಿ ರೇಡಿಯೋ ರೂಪದರ್ಶಿ ಬೇಬಿಯ ಚೆಹರೆ ನನ್ನ ತಮ್ಮನ ಮುಖವನ್ನು ಹೋಲುತ್ತಿತ್ತು. ಇಂದಿಗೆ (3-10-2022) ನನ್ನ ತಮ್ಮ ದೈಹಿಕವಾಗಿ ಕಣ್ಮರೆಯಾಗಿ ಇವತ್ತಿಗೆ ಆರು ದಶಕಗಳೇ ಉರುಳಿ ಹೋಗಿವೆ 😢

Comments

Popular posts from this blog

ಕನ್ನಡ ಓದಲು ಬರೆಯಲು ಕಲಿತಿದ್ದು ಹೇಗೆ

ಮಾವಿನ ಉಪ್ಪಿನಕಾಯಿ ತಯಾರಿಸುವ ವಿಧಾನ